ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವು ಗಣೇಶ, ಈಶ್ವರ, ಪಾರ್ವತಿ, ಲಕ್ಷ್ಮಿ ನರಸಿಂಹ, ವೇಣುಗೋಪಾಲ ಸ್ವಾಮಿ, ಚಾಮುಂಡೇಶ್ವರಿ, ಆಂಜನೇಯ, ಸುಬ್ರಮಣ್ಯ, ಕೋದಂಡ ರಾಮ ಹೀಗೆ ಬಗೆ ಬಗೆಯ ದೇವರುಗಳಿಗೆ ಕಟ್ಟಿಸಿರುವ ದೇಗುಲಗಳ ಬಗ್ಗೆ ಸಾಕಷ್ಟು ಕೇಳಿರ್ತೀವಿ. ಆದ್ರೆ ವೀರಭದ್ರೇಶ್ವರ ಸ್ವಾಮಿಗೆ ಮುಡಿಪಾಗಿರುವ ದೇವಸ್ಥಾನಗಳ ಬಗ್ಗೆ ಕೇಳಿರುವುದು ತುಂಬಾ ವಿರಳ ಅಲ್ವಾ? ಬನ್ನಿ ಇವತ್ತಿನ ಲೇಖನದಲ್ಲಿ ತುಂಬಾ ಅಪರೂಪವಾದ ವೀರಭದ್ರೇಶ್ವರನ ಸನ್ನಿಧಾನದ ಕುರಿತು ಮಾಹಿತಿಯನ್ನು ಪಡೆದುಕೊಂಡು ಬರೋಣ. ಕೊಡದ ಗುಡ್ಡ ಎಂಬ ಪ್ರದೇಶದ ತುತ್ತ ತುದಿಯಲ್ಲಿ ವೀರಭದ್ರೇಶ್ವರ ಸ್ವಾಮಿಯು ನೆಲೆನಿಂತು ತನ್ನ ಬಳಿ ಬರುವ ಭಕ್ತರ ಸಂಕ್ಷ್ಟಗಳನ್ನು ಪರಿಹಾರ ಮಾಡುತ್ತಿದ್ದು, ಯಾರು ಈ ದೇವನನ್ನು ಕಣ್ಣು ತುಂಬಿಕೊಳ್ಳಬೇಕು ಎಂದ್ರೆ ಮುನ್ನೂರಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಸಾಗಬೇಕು. ಅರ್ಧ ಬೆಟ್ಟವನ್ನು ಹತ್ತುತ್ತಿದ್ದಂತೆ ಗಣಪತಿ ಹಾಗೂ ನವಗ್ರಹಗಳ ಗುಡಿಯ ದರ್ಶನ ಮಾಡಬಹುದು. ಪ್ರಕೃತಿಯ ವಿಹಂಗಮ ನೋಟವನ್ನು ನೋಡ್ತಾ ದೇವನ ಸನ್ನಿಧಾನಕ್ಕೆ ತಲುಪಿದರೆ ಮನಸ್ಸು ಪ್ರಫುಲ್ಲ ಆಗುತ್ತೆ. ಸುಮಾರು 800-1000 ವರ್ಷಗಳ ಇತಿಹಾಸವಿರುವ ಈ ದೇಗುಲವನ್ನು ಹರಪನ ಹಳ್ಳಿಯ ಪಾಳೇಗಾರರರು ನಿರ್ಮಿಸಿದರು ಎಂದು ಹೇಳಲಾಗುತ್ತದೆ.
ದೇಗುಲವು ಗೋಪುರ, ಗರ್ಭಗೃಹ, ಪ್ರಾಂಗಣವನ್ನು ಒಳಗೊಂಡಿದೆ. ದೇಗುಲದ ಗರ್ಭಗೃಹದಲ್ಲಿ ಸುಮಾರು 8 ಅಡಿ ಎತ್ತರವಾದ ವೀರಭದ್ರೇಶ್ವರ ಸ್ವಾಮಿಯ ಸ್ವಯಂಭೂ ಮೂರ್ತಿಯನ್ನು ಕಣ್ಣು ತುಂಬಿಕೊಳ್ಳಬಹುದು. ಈ ದೇವನ ಬಳಿ ಬಂದು ಭಕ್ತಿಯಿಂದ ಬೇಡಿಕೊಂಡರೆ ಮನಸಿನ ಇಷ್ಟಗಳು ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ಸಾಕಷ್ಟು ಮಂದಿ ವಾಮಾಚಾರ, ಕಣ್ಣು ದೃಷ್ಠಿ, ಹಾಗೂ ಇನ್ನಿತರ ಸಮಸ್ಯೆಗಳಿಂದ ಪಾರಾಗಲು ದೇಗುಲಕ್ಕೆ ಬಂದು ತಾಯ್ತವನ್ನು ಕಟ್ಟಿಸಿಕೊಂಡು ಹೋಗುತ್ತಾರೆ. ಈ ಕ್ಷೇತ್ರದಲ್ಲಿ ವೀರಭದ್ರ ಸ್ವಾಮಿಯ ಜೊತೆಗೆ ಅಮ್ಮನವರು, ಹಾಗೂ ಆಂಜನೇಯ ಸ್ವಾಮಿಯು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಕೊಟ್ಟೂರಿನಲ್ಲಿ ನೆಲೆಸಿದ್ದ ವೀರಭದ್ರೇಶ್ವರ ಸ್ವಾಮಿಯು ಈ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುವುದುರ ಹಿಂದೆ ಒಂದು ಘಟನೆ ಇದೆ. ಈ ಕ್ಷೇತ್ರದಲ್ಲಿ ನೆಲೆಸುವುದಕ್ಕೊ ಮುಂಚೆ ವೀರಭದ್ರೇಶ್ವರ ಸ್ವಾಮಿಯು ಶಿಖಪುರ ಅಂದ್ರೆ ಈಗಿನ ಕೊಟ್ಟೂರಿನಲ್ಲಿ ನೆಲೆಸಿದ್ದರು, ಒಂದು ಬಾರಿ ಪಂಚ ಗನಾದೇಶ್ವರ ಗಣಾದೀ ಕೊಟ್ಟುರೇಶ್ವರರು ಊರೂರು ತಿರುಗುತ್ತಾ ಕೊಟ್ಟುರಿಗೆ ಬಂದಾಗ ರಾತ್ರಿ ಸಮಯ ಆಗಿದ್ದರಿಂದ ಆ ಊರಿನಲ್ಲಿ ನೆಲೆಸಿದ ವೀರಭದ್ರ ಸ್ವಾಮಿಯ ಬಳಿ ಸ್ವಲ್ಪ ಜಾಗವನ್ನು ಕೇಳಿದ್ರು, ಇವರ ಮಾತಿಗೆ ಒಪ್ಪಿ ವೀರಭದ್ರೇಶ್ವರರು ತನ್ನ ಸ್ಥಳದಲ್ಲಿ ಕೊಟ್ಟುರೇಶ್ವರರಿಗೆ ತಂಗಲು ಜಾಗವನ್ನು ನೀಡಿದ್ರು, ಮರುದಿನ ಬೆಳಗಾಗುವಷ್ಟರಲ್ಲಿ ಕೊಟ್ಟುರೇಶ್ವರರೂ ಎಲ್ಲಾ ಜಾಗವನ್ನು ಆಕ್ರಮಿಸಿಕೊಂಡು ವೀರಭದ್ರೇಶ್ವರರಿಗೇ ಜಾಗವಿಲ್ಲದಂತೆ ಮಾಡಿದ್ರು ಆಗ ವೀರಭದ್ರೇಶ್ವರ ಹೀಗೇಕೆ ಮಾಡುವಿರಿ ಎಂದು ಕೇಳಿದಾಗ ಕೊಟ್ಟುರೇಷ್ವರರೂ ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಲ್ಲಾ ಶಿವನ ಇಚ್ಛೆ, ಇನ್ನೂ ಮುಂದೆ ನೀವು ಕೊಡದ ಗುಡ್ಡದಲ್ಲಿ ನೆಲೆಸಿ ಸಕಲ ಭಕ್ತರನ್ನು ಹರಸಿ ಎಂದು ಬೇಡಿಕೊಂಡ ಪರಿಣಾಮ,
ಕೊಟ್ಟೂರಿನಲ್ಲಿ ನೆಲೆಸಿದ್ದ ವೀರಭದ್ರೇಶ್ವರ ಸ್ವಾಮಿಯು ಈ ಕ್ಷೇತ್ರದಲ್ಲಿ ನೆಲೆಸುವ ಹಾಗಾಯ್ತು ಎಂದು ಈ ಕ್ಷೇತ್ರದ ಲ್ಲಿನ ಸ್ಥಳ ಪುರಾಣದ ಲ್ಲಿ ತಿಳಿಸಲಾಗಿದೆ. ಇನ್ನೂ ಕಾರ್ತಿಕ ಮಾಸದಲ್ಲಿ ಇಲ್ಲಿನ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಜಾತ್ರಾ ಮಹೋತ್ಸವ ನಡೆಸಲಾಗುವುದು. ಈ ಸಮಯದಲ್ಲಿ ಕೊಟ್ಟೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಹಾವೇರಿ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ನಿತ್ಯ ಪೂಜೆಗೊಳ್ಳುವ ಈ ದೇವನನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ದರ್ಶನ ಮಾಡಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ಅಭಿಷೇಕ ಸೇವೆ, ಅಲಂಕಾರ ಸೇವೆ, ಪಂಚಾಮೃತ ಅಭಿಷೇಕ, ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಈ ಪುಣ್ಯ ಕ್ಷೇತ್ರ ವೂ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕೊಡದ ಗುಡ್ಡ ಎಂಬ ಗ್ರಾಮದಲ್ಲಿದೆ. ಈ ಸ್ಥಳವು ದಾವಣಗೆರೆ ಇಂದ 45 ಕಿಮೀ, ಜಗಳೂರಿನಿಂದ 17 ಕಿಮೀ, ಬೆಂಗಳೂರಿನಿಂದ 254 ಕಿಮೀ, ಚಿತ್ರದುರ್ಗ ದಿಂದ 56 ಕಿಮೀ ದೂರದಲ್ಲಿದೆ. ಈ ಪುಣ್ಯ ಕ್ಷೇತ್ರಕ್ಕೆ ನೀವು ಒಮ್ಮೆ ಭೇಟಿ ನೀಡಿ. ಶುಭದಿನ.