ನಮಸ್ತೆ ಪ್ರಿಯ ಓದುಗರೇ, ಜಗತ್ತಿನ ಎಲ್ಲ ಜೀವಿಗಳ ತಾಯಿ ಎಂದೇ ಕರೆಯುವ ದುರ್ಗಾ ಪರಮೇಶ್ವರಿ ನೆಲೆ ನಿಲ್ಲದ ಸ್ಥಳಗಳು ಇಲ್ಲ. ಕೊಲ್ಲೂರು ಮೂಕಾಂಬಿಕೆ ಆಗಿ ಮಧುರೆಯಲ್ಲಿ ಮೀನಾಕ್ಷಿ ಆಗಿ, ಶೃಂಗೇರಿಯಲ್ಲಿ ಶಾರದಾಂಬೆ ಆಗಿ, ಶಿರಸಿಯಲ್ಲಿ ಮಾರಿಕಾಂಬೆ ಆಗಿ ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ಆಗಿ, ಕಟೀಲಿನಲ್ಲಿ ದುರ್ಗಾ ಪರಮೇಶ್ವರಿ ಆಗಿ ಬೆಲೆ ನಿಂತು ಭಕ್ತರಿಗೆ ತನ್ನ ಅಭಯ ಹಸ್ತ ನೀಡುತ್ತಿದ್ದಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಕುಂಭಾಸಿಯಲ್ಲಿ ನೆಲೆಸಿರುವ ಶ್ರೀ ದುರ್ಗಾ ಪರಮೇಶ್ವರಿ ದೇವಿಯ ದರ್ಶನ ಮಾಡಿ ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಕುಂಭಾಸಿ ಇಂದ ತಕ್ಷಣ ನಮಗೆ ನೆನಪಾಗೋದು ಆನೆ ಗುಡ್ಡೆಯ ಶ್ರೀ ಮಹಾಗಣಪತಿ ದೇವರು. ಈ ದೇವರ ದೇಗುಲಕ್ಕೆ ಹೋದವರು ಮಹಾ ಗಣಪತಿ ದೇಗುಲದಿಂದ ಕೇವಲ 3 ಕಿಮೀ ದೂರದಲ್ಲಿರುವ ಚಂಡಿಕಾ ದುರ್ಗಾ ಪರಮೇಶ್ವರಿ ದೇಗುಲಕ್ಕೆ ಕೂಡ ಭೇಟಿ ನೀಡುತ್ತಾರೆ. 75 ಎತ್ತರದ ಗೋಪುರವನ್ನು ಹೊಂದಿರುವ ಈ ಆಲಯವು ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣ ಆಗಿದ್ದು, ಆಲಯವು ಮುಖ ಮಂಟಪ,ಗರ್ಭ ಗೃಹ,ಹಾಗೂ ಪ್ರಸಾದ ಮಂಟಪಗಳನ್ನು ಒಳಗೊಂಡಿದೆ.
ದೇಗುಲದ ಗೋಪುರದ ಮೇಲೆ ವಿವಿಧ ದೇವತೆಗಳ ಮೂರ್ತಿಗಳನ್ನು ಕೆತ್ತಲಾಗಿದೆ. ಆಲಯದ ಪ್ರಾಂಗಣದ ಜಗಲಿಯಲ್ಲಿ ಪಲ್ಲವ ಶೈಲಿಯಲ್ಲಿ ನಿರ್ಮಿಸಿರುವ ಆನೆಗಳು ದೇವಿಯ ಸನ್ನಿಧಾನಕ್ಕೆ ಬರುವಂತೆ ಸ್ವಾಗತ ಮಾಡುತ್ತವೆ. ಬಂಗಾರದ ವರ್ಣ ಲೇಪಿತವಾಗಿರುವ ವಿವಿಧ ಕಲೆಗಳ ಚಿತ್ತಾರ ಹೊಂದಿರುವ ಇಲ್ಲಿನ ಕಂಬಗಳು ನಮ್ಮನ್ನು ಪ್ರಾಚೀನ ಕಲಾ ವೈಭೋಗ ಕ್ಕೆ ಕೊಂಡೊಯ್ಯುತ್ತವೆ. ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಏನು ಅಂದ್ರೆ ಅದು ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರು. ಗರ್ಭ ಗುಡಿಯಲ್ಲಿ ಈ ತಾಯಿಯು ಚತುರ್ಭುಜ ಧಾರಿಣಿ ಆಗಿ ಬಲಗೈಯಲ್ಲಿ ತ್ರಿಶೂಲ ಎಡಗೈಯಲ್ಲಿ ಚಕ್ರವನ್ನು ಇನ್ನೊಂದು ಕೈಯಲ್ಲಿ ಅಭಯ ಹಸ್ತ, ಹಾಗೂ ಮತ್ತೊಂದು ಕೈಯಲ್ಲಿ ವರದ ಹಸ್ತವನ್ನು ಹಿಡಿದು ಕರುಣಾ ಪೂರಿತ ಕಣ್ಣುಗಳಿಂದ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಸರ್ವಾಳಂಕೃತ ಭೂಶಿತೆ ಆದ ಈ ದೇವಿಯ ಸನಿಧ್ಯವೆ ಒಂದು ಅನುಪಮವಾದ ಅನುಭೂತಿ ಆಗಿದೆ. ಈ ಕ್ಷೇತ್ರಕ್ಕೆ ಬಂದವರು ದೇಗುಲದ ಸುತ್ತ ಹನ್ನೊಂದು ಪ್ರದಕ್ಷಿಣೆ ಹಾಕಿದ್ರೆ ಅವರ ಎಲ್ಲಾ ಮನೋ ಕಾಮನೆಗಳು ಪೂರ್ತಿ ಆಗುತ್ತೆ ಎಂದು ಹೇಳಲಾಗುತ್ತದೆ.
ಹೀಗಾಗಿ ಈ ದೇವಿಯ ಸನ್ನಿಧಾನಕ್ಕೆ ಬರುವವರು ತಪ್ಪದೇ ಹನ್ನೊಂದು ಪ್ರದಕ್ಷಿಣೆ ಹಾಕಬೇಕು ಎಂಬ ಮಾತುಗಳು ಇಲ್ಲಿ ಕೇಳಿ ಬರುತ್ತೆ. ಇನ್ನೂ ಅಗಾಧ ದೇವಿ ಭಕ್ತರಾದ ದೇವರಾಯ ಕನಸಿನಲ್ಲಿ ಒಮ್ಮೆ ತಾಯಿ ದುರ್ಗಾ ಪರಮೇಶ್ವರಿ ಕಾಣಿಸಿಕೊಂಡು ಭಕ್ತ ನಂಗೆ ಒಂದು ಆಲಯವನ್ನು ನಿರ್ಮಾಣ ಮಾಡಿ ಎಂದು ಹೇಳಿದಳಂತೆ, ಹೀಗಾಗಿ ದೇವರಾಯ ರು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾ ಸರಸ್ವತಿ ಅಂಶವನ್ನು ಹೊಂದಿರುವ ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ಈ ಸುಂದರವಾದ ಆಲಯವನ್ನು ನಿರ್ಮಾಣ ಮಾಡಿದರು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಈ ದೇಗುಲದಲ್ಲಿ ಮೂಲಾ ನಕ್ಷತ್ರದಲ್ಲಿ ಚಂಡಿಕಾ ಹೋಮ ನೆರವೇರುತ್ತದೆ. ಭಕ್ತರು ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸುವ ಈ ದೇವಿಯನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ದರ್ಶನ ಮಾಡಬಹುದು. ಚಂಡಿಕಾ ದುರ್ಗಾ ಪರಮೇಶ್ವರಿ ನೆಲೆ ನಿಂತ ಈ ಪುಣ್ಯ ಕ್ಷೇತ್ರವೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಸಿ ಎಂಬ ಪುಟ್ಟ ಊರಿನಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಗಣಪತಿಯ ದರ್ಶನದ ಜೊತೆ ತಾಯಿ ದುರ್ಗಾ ದೇವಿಯ ದರ್ಶನ ಪಡೆದು ಬನ್ನಿ. ಶುಭದಿನ.