ನಮಸ್ತೆ ಪ್ರಿಯ ಓದುಗರೇ, ಸೃಷ್ಟಿಯ ಲಯ ಕರ್ತನಾದ ಪರಮೇಶ್ವರನು ಪಾರ್ವತಿಯ ಜತೆಗೂಡಿ ತನ್ನನ್ನು ನಂಬಿರುವ ಭಕ್ತರನ್ನು ಬೆಂಬಿಡದೆ ಪೋರೆಯುತ್ತಿದ್ದಾನೆ. ಇಡೀ ಜಗತ್ತಿಗೆ ತಂದೆ ತಾಯಿ ಆಗಿರುವ ಶಿವ ಪಾರ್ವತಿಯರು ಆದರ್ಶ ದಂಪತಗಳು ಹೌದು. ಇದೇ ಕಾರಣಕ್ಕೆ ವಿವಾಹ ಮಹೋತ್ಸವದ ಶುಭ ಸಂದರ್ಭದಲ್ಲಿ ಗೌರಿ ಪೂಜೆಯನ್ನು ಮಾಡಲಾಗುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಸಕಲ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಪಾರ್ವತಿ ಪರಮೇಶ್ವರ ಇಬ್ಬರೂ ಒಟ್ಟಿಗೆ ನೆಲೆ ನಿಂತಿರುವ ಅಪರೂಪದ ಕ್ಷೇತ್ರವನ್ನು ದರ್ಶನ ಮಾಡಿ ಬರೋಣ. ಕಲ್ಲು ಬಂಡೆಗಳಿಂದ ಆವೃತವಾದ ಸುಂದರವಾದ ಪ್ರದೇಶವನ್ನು ಹೊಂದಿರುವ ಕಂದೆಗಾಲದಲ್ಲಿ ಪುರಾತನವಾದ ಸೋಮೇಶ್ವರ ಪಾರ್ವತಾಂಬ ಸನ್ನಿಧಾನ ಇದ್ದು, ಈ ದೇಗುಲವು ಸುಂದರವಾದ ಗೋಪುರ, ಪ್ರದಕ್ಷಿಣಾ ಪಥ, ನವಾರಂಗವನ್ನು ಒಳಗೊಂಡಿದೆ. ಈ ಸ್ಥಳವನ್ನು ಸ್ಕಂದಗಿರಿ, ಕಂದೆಗಾಲ ಬೆಟ್ಟ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಬೊಮ್ಮರಸ ಹಾಗೂ ತಿಮ್ಮರಸ ರ ಕಾಲದಲ್ಲಿ ಈ ದೇವಾಲಯ ನಿರ್ಮಾಣ ಆಗಿದೆ ಎಂದು ಹೇಳಲಾಗುತ್ತದೆ.
ಈ ಕ್ಷೇತ್ರದಲ್ಲಿ ಪರಮೇಶ್ವರನು ಸ್ವಯಂಭೂ ಆಗಿ ನೆಲೆ ನಿಂತಿದ್ದು, ಪಾರ್ವತಿ ದೇವಿಯ ವಿಗ್ರಹವನ್ನು ಅಗಸ್ತ್ಯ ಮುನಿಗಳು ಪ್ರತಿಷ್ಠಾಪಿಸಿ ಪೂಜಿಸಿದರು ಎಂಬ ಪ್ರತೀತಿ ಇದೆ. ಇನ್ನೂ ವಿಂದ್ಯಾ ಪರ್ವತದ ಅಹಂಕಾರವನ್ನು ದೂರ ಮಾಡೋಕೆ ಅಂತ ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುತ್ತಾ ಬಂದ ಅಗಸ್ತ್ಯರು ಇಲ್ಲಿನ ಪ್ರಶಾಂತವಾದ ವಾತಾವರಣಕ್ಕ ಮನ ಸೋತು ಇಲ್ಲಿ ಪಾರ್ವತಿ ಪರಮೇಶ್ವರ ರ ಕುರಿತಾಗಿ ತಪಸ್ಸು ಆಚರಿಸಿದರು ಆಗ ಅವರ ತಪಸ್ಸಿಗೆ ಮೆಚ್ಚಿ ಪರಮೇಶ್ವರನು ಪಾರ್ವತಿ ದೇವಿ ಸಮೇತನಾಗಿ ದರ್ಶನ ನೀಡಿದನು. ಹಾಗೂ ಶಿವನು ಇಲ್ಲಿ ಸ್ವಯಂಭೂ ಆಗಿ ನೆಲೆಸಿದನು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿಸಲಾಗಿದೆ. ನಂತರ ಅಗಸ್ತ್ಯರು ತಾವು ಯಾವ ರೂಪದಲ್ಲಿ ಪಾರ್ವತಿ ದೇವಿಯನ್ನು ಕಣ್ಣು ತುಂಬಿಕೊಂಡರೋ ಅದೇ ರೂಪದಲ್ಲಿ ದೇವಿಯ ವಿಗ್ರಹವನ್ನು ಕೆತ್ತಿಸಿ ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂದು ಪ್ರತೀತಿ ಇದೆ. ಅಲ್ಲದೆ ಅಗಸ್ತ್ಯರ ಅಪೇಕ್ಷೆ ಮೇರೆಗೆ ಪಾರ್ವತಿ ಪರಮೇಶ್ವರ ಇಬ್ಬರೂ ಈ ಸ್ಥಳದಲ್ಲಿ ಮತ್ತೊಮ್ಮೆ ವಿವಾಹ ಆದರೂ ಎಂಬ ನಂಬಿಕೆ ಕೂಡ ಇದೆ. ಹೀಗಾಗಿ ವಿವಾಹ ವಿಳಂಬ ಸಮಸ್ಯೆ ಇರುವವರು ಈ ಕ್ಷೇತ್ರಕ್ಕೆ ಬಂದು ಕಲ್ಯಾಣೋತ್ಸವ ಸೇವೆಯನ್ನು ಮಾಡಿದರೆ ಅವರಿಗೆ ಶ್ರೀಘ್ರವಾಗಿ ಕಂಕಣ ಬಲ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ.
ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ತಾರಕಸುರನನ್ನು ಸಂಹರಿಸಿದ ನಂತರ ಷಣ್ಮುಖ ನು ಇಲ್ಲಿಗೆ ಬಂದು ಇಲ್ಲಿನ ಬಂಡೆಗಳ ಮೇಲೆ ಕುಳಿತು ತಪಸ್ಸನ್ನು ಆಚರಿಸಿದನು ಎಂಬ ಮಾತುಗಳು ಇದ್ದು, ಸುಬ್ರಮಣ್ಯ ಸ್ವಾಮಿ ತಪಸ್ಸನ್ನು ಆಚರಿಸಿದ ಸ್ಥಳ ಆದ್ದರಿಂದ ಇಲ್ಲಿರುವ ಬೆಟ್ಟವನ್ನು ಸ್ಕಂದಗಿರಿ ಅಂತ ಕರೆಯಲಾಗುತ್ತದೆ. ಆರ್ಥಿಕ ಸಮಸ್ಯೆ, ವ್ಯವಾಹರಿಕಾ ಸಮಸ್ಯೆ, ಕೌಟುಂಬಿಕ ಸಮಸ್ಯೆ ಹೀಗೆ ಏನೇ ಸಮಸ್ಯೆ ಇದ್ದರೂ ಈ ಕ್ಷೇತ್ರಕ್ಕೆ ಬಂದು ಸೋಮೇಶ್ವರ ಹಾಗೂ ಪಾರ್ವತಿ ದೇವಿಯ ಬಳಿ ನಮ್ಮ ಕೈಲಾದ ಸೇವೆ ಮಾಡುತ್ತೇವೆ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಭಕ್ತಿಯಿಂದ ಬೇಡಿಕೊಂಡು ಹೋದ್ರೆ ಎಷ್ಟೇ ಕಷ್ಟಕರ ಸಮಸ್ಯೆ ಇದ್ರೂ ಅವು ದೂರಾಗುತ್ತದೆ ಎನ್ನುವುದು ಈ ದೇಗುಲಕ್ಕೆ ಭೇಟಿ ನೀಡುವ ಭಕ್ತರ ನಂಬಿಕೆ ಆಗಿದೆ. ಅಲ್ಲದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಇಲ್ಲಿರುವ ಸೋಮೇಶ್ವರ ಲಿಂಗ ಹಾಗೂ ನಂದಿಯ ವಿಗ್ರಹ ಭತ್ತದ ಕಾಳಿನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎನ್ನುವುದು ಈ ಕ್ಷೇತ್ರದಲ್ಲಿ ನಡೆಯುವ ವಿಸ್ಮಯ ಆಗಿದ್ದು, ಇಲ್ಲಿ ನೆಲೆಸಿರುವ ಪಾರ್ವತಿ ಅಮ್ಮನವರು ಶಾಂತ ಸ್ವರೂಪಿಣಿ ಆಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ಅಲ್ಲದೆ ಈ ಕ್ಷೇತ್ರದಲ್ಲಿ ಅಗಸ್ತ್ಯರು ಶಿವನಿಗೆ ಪೂಜೆ ಮಾಡಲು ತಮ್ಮ ಕಮಂಡಲದಿಂದ ಸೃಷ್ಟಿಸಿದ ಪುಟ್ಟ ತೀರ್ಥ ಕೊಳ ಇದ್ದು, ಈ ಕೊಳವನ್ನು ಪಾಪನಾಶಿನಿ ಎಂದು ಕರೆಯುತ್ತಾರೆ. ಪ್ರತಿ ವರ್ಷ ಈ ಸ್ಥಳದಲ್ಲಿ ವೈಶಾಖ ಮಾಸ ಪೌರ್ಣಮಿ ಯಂದೂ ದೇವರ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಶಿವ ಪಾರ್ವತಿಯರು ಜಾಗೃತವಾಗಿ ಇರುವ ಈ ಪುಣ್ಯ ಕ್ಷೇತ್ರವೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೆಗಾಲ ಎಂಬ ಕ್ಷೇತ್ರದಲ್ಲಿ ಇದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವನ ಆಶೀರ್ವಾದ ಪಡೆಯಿರಿ. ಶುಭದಿನ.