ನಮಸ್ತೆ ಪ್ರಿಯ ಓದುಗರೇ, ನಾವು ಯಾವುದೇ ಕೆಲಸವನ್ನು ಪ್ರಾರಂಭ ಮಾಡಬೇಕಾದ್ರೆ ಮೊದಲು ಸ್ತುತಿಸೋದು ಆದಿ ಪೂಜಿತ ನಾದ ಗಣೇಶನನ್ನು. ನಮ್ಮ ದೇಶದಲ್ಲಿ ಗಣೇಶನಿಗೆ ಅರ್ಪಿತವಾದ ದೇವಾಲಯಗಳು ಸಾಕಷ್ಟಿವೆ. ಆದ್ರೆ ನಾವು ಇವತ್ತು ಮಾಹಿತಿಯನ್ನು ಹೊತ್ತು ತಂದಿರುವ ಗಣೇಶನ ದೇವಾಲಯ ಬೇರೆಲ್ಲಾ ಗಣೇಶನ ದೇವಾಲಯಗಳಿಗಿಂತ ತುಂಬಾ ಭಿನ್ನವಾಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ವಕ್ರತುಂಡ ನು ನೆಲೆಸಿರುವ ಆ ಕ್ಷೇತ್ರ ಯಾವುದು ಅಲ್ಲಿನ ಮಹಿಮೆಗಳನ್ನು ಏನೇನು ಎಂದು ತಿಳಿದುಕೊಂಡು ಬರೋಣ. ಸಾಮಾನ್ಯವಾಗಿ ದೇವಾಲಯಗಳು ಇಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಗುಡಿ ಗೋಪುರಗಳು ಗರ್ಭಗೃಹ ನೆನಪಾಗುತ್ತದೆ. ಆದ್ರೆ ಆವಾಂಚ ಗ್ರಾಮದಲ್ಲಿ ನೆಲೆಸಿರುವ ಈ ಗಣಪತಿಗೆ ಯಾವುದೇ ದೇವಾಲಯವನ್ನು ನಿರ್ಮಿಸಲಾಗಿಲ್ಲ. ಬದಲಾಗಿ ಗಣೇಶನು ವಿಶಾಲವಾದ ಬಯಲಿನಲ್ಲಿ ನಿಂತು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.
ಈ ದೇವಾಲಯವನ್ನು ಐಶ್ವರ್ಯ ಗಣಪತಿ ಎಂದೇ ಕರೆಯಲಾಗುತ್ತಿದ್ದು, ಇಲ್ಲಿಗೆ ಬಂದು ಗಣೇಶನನ್ನು ದರ್ಶನ ಮಾಡಿ ಭಕ್ತಿಯಿಂದ ಪೂಜೆ ಮಾಡಿದ್ರೆ, ಅವರಿಗೆ ಬದುಕಿನಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿ ಆಗುತ್ತೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಗಣೇಶನನ್ನು ಐಶ್ವರ್ಯ ಗಣಪತಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಎನ್ನುವುದು ಈ ದೇವನನ್ನು ನಂಬಿರುವ ಭಕ್ತರ ಮನದ ಮಾತಾಗಿದೆ. ವಿಶಾಲವಾದ ಪ್ರದೇಶದಲ್ಲಿರುವ ಗಣೇಶನ ವಿಗ್ರಹ ಸುಮಾರು ಮೂವತ್ತು ಅಡಿ ಎತ್ತರವಾಗಿದ್ದು, ಈ ವಿಗ್ರಹವನ್ನು ಏಕ ಶಿಲೆಯಲ್ಲಿ ಕೆತ್ತಲಾಗಿದೆ. ಸುಮಾರು 11 ನೇ ಶತಮಾನದಲ್ಲಿ ರಾಜ್ಯವನ್ನು ಆಳುತ್ತಿದ್ದ, ಚಾಲುಕ್ಯ ರಾಜನಾದ ಥೈಲಪನು ಈ ಊರಿಗೆ ಬಂದಿದ್ದನು. ಆತ ಇಲ್ಲಿನ ಒಂದು ಬೃಹತ್ ಬಂಡೆಯನ್ನು ನೋಡಿ. ಬಂಡೆಯಲ್ಲಿ ಗಣೇಶನ ಮೂರ್ತಿಯನ್ನು ಕೆತ್ತಿಸಬೇಕು ಎಂದು ನಿರ್ಧಾರ ಮಾಡಿ. ಶಿಲ್ಪಿಗಳನ್ನು ಕರೆಸಿ ಗಣೇಶನ ವಿಗ್ರಹ ಕೆತ್ತಿಸಲು ಪ್ರಾರಂಭ ಮಾಡಿದರು. ಆದ್ರೆ ಕಾರಣಾಂತರಗಳಿಂದ ತೈಲಪನು ಮೂರ್ತಿ ಕೆತ್ತನೆ ಮುಗಿಯುವುದರ ಒಳಗಡೆ ತನ್ನ ರಾಜಧಾನಿಗೆ ಹಿಂತಿರುಗಿ ಹೋಗಬೇಕಾಯಿತು. ರಾಜನು ಹೋದಮೇಲೆ ಶಿಲ್ಪಿಗಳು ಈ ಗಣೇಶನ ವಿಗ್ರಹ ದ ಕೆತ್ತನೆಯನ್ನು ಪೂರ್ಣ ಮಾಡಲಿಲ್ಲ. ಹೀಗಾಗಿ ಇಂದಿಗೂ ಕೂಡ ಗಣೇಶ ವಿಗ್ರಹದ ಹಿಂಭಾಗ ಕಲ್ಲಿನ ರೂಪದಲ್ಲಿ ಉಳಿದುಕೊಂಡಿರುವುದನ್ನೂ ನೋಡಬಹುದು. ಸುಮಾರು ವರ್ಷಗಳ ಹಿಂದೆ ಮಹಾರಾಷ್ಟ್ರದ ಮಹಾಲಕ್ಷ್ಮಿ ಸೇವಾ ಟ್ರಸ್ಟ್ ಉತ್ತರದೇವಿ ಸೇವಾ ಟ್ರಸ್ಟ್ ಅವರು ಈ ಗಣೇಶನ ಬಗ್ಗೆ ತಿಳಿದುಕೊಂಡು ಗಣೇಶನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆಯನ್ನು ಮಾಡಿಸಿದರು.
ಅಲ್ಲದೆ ಗಣೇಶನ ವಿಗ್ರಹಕ್ಕೆ ಕಣ್ಣನ್ನು ಕೆತ್ತದೆ ಇದ್ದುದರಿಂದ, ಗಣಪನ ಕಣ್ಣುಗಳು ಇರಬೇಕಾದ ಜಾಗದಲ್ಲಿ ಕಪ್ಪು ಬಿಳುಪಿನ ಬಣ್ಣವನ್ನು ಹಾಕಿ ಗಣೇಶನ ಹಣೆಗೆ ವಿಭೂತಿಯನ್ನು ಬಳಿದರು. ಇವರು ಗಣೇಶನ ಪ್ರಾಣ ಪ್ರತಿಷ್ಠೆಯನ್ನು ಮಾಡಿದ ನಂತರ ಇಲ್ಲಿ ನೆಲೆಸಿರುವ ಗಣೇಶನಿಗೆ ನಿತ್ಯ ಪೂಜೆ ಮಾಡಲಾಗುತ್ತಿದೆ. ಅಷ್ಟೈಶ್ವರ್ಯ ಕರುಣಿಸುವ ಗಣಪ ಎಂದೇ ಖ್ಯಾತವಾಗಿರುವ ಈ ಗಣೇಶನನ್ನು ದಿನದ ಯಾವ ಸಮಯದಲ್ಲಿ ಬೇಕಾದರೂ ದರ್ಶನ ಮಾಡಬಹುದು. ಈ ಗಣೇಶನಿಗೆ ಆದಷ್ಟು ಬೇಗ ದೇವಾಲಯವನ್ನು ನಿರ್ಮಿಸಬೇಕು ಎಂದು ಆವಂಚಾ ಗ್ರಾಮದವರು ಒಂದು ಯೋಜನೆಯನ್ನು ತರುತ್ತಾರೆ. ಚಳಿ ಮಳೆ ಬಿಸಿಲು ಏನೇ ಬಂದ್ರು ನಗು ಮುಖದಿಂದ ಬೇಡಿ ಬಂದ ಭಕ್ತರನ್ನು ಹರಸುತ್ತಿದ್ದನೆ ಈ ಗಣಪತಿ. ಸಕಲರಿಗೂ ಶುಭವನ್ನೆ ಮಾಡುವ ಈ ಐಶ್ವರ್ಯ ಗಣಪತಿ ಯನ್ನ ತೆಲಂಗಾಣದ ತಿಮ್ಮಾಜಿ ಪೇಟೆ ಮಂಡಲದ ಆವಂಚ ಗ್ರಾಮದ ಹೊಲವೊಂದರಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಸ್ಥಳವು ಗುಲ್ಬರ್ಗದಿಂದ 183 ಕಿಮೀ, ಮೆಹಬೂಬ್ ನಗರಡಿಂದ 32 ಕಿಮೀ, ದೂರದಲ್ಲಿದೆ. ಆವಾಂಚಾ ಗ್ರಾಮವು ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ. ಮಹಬೊಬ್ ನಗರದಿಂದ ಬಾಡಿಗೆ ವಾಹನದ ಮುಖಾಂತರ ಸುಲಭವಾಗಿ ತಲುಪಬಹುದು. ಆದಷ್ಟು ಬೇಗ ಈ ಗಣೇಶನ ವಿಗ್ರಹ ಇರುವ ಸ್ಥಳದಲ್ಲಿ ಭವ್ಯವಾದ ಆಲಯ ನಿರ್ಮಾಣ ಆಗಲಿ ಎಂದು ಆಶಿಸುತ್ತಾ ಈ ಲೇಖನಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇವೆ. ಶುಭದಿನ.